Monday 30 December 2013

ಬಾ ಗೆಳೆಯ ....

 ಕೆಸರು ತುಂಬಿದ ಕೆರೆಯಂತಹ ಮನಕೆ
 ಕೆಂದಾವರೆಯಾಗಿ  ಬಾ ....
 ವರ್ಷಧಾರೆಗೆ ಕಾದಿರುವ ಜಾತಕಪಕ್ಷಿಯಂತಹ ಹೃದಯಕೆ
 ಪ್ರೀತಿಯ ಮಳೆ ಹನಿ ಸುರಿಸು ಬಾ ....
 ಚಂದ್ರಮನಿಗೆ ಕಾಯುವ ಚಕೋರ ಕಣ್ಣಿಗೆ
 ಬೆಳದಿಂಗಳಾಗಿ ಬಾ ....
 ನಿನಗಾಗಿ ಕಾಯುತ್ತಿರುವ ರಾಧೆಗೆ
 ಕೃಷ್ಣನಾಗಿ ಬಾ ....


Monday 1 April 2013

crushhhhhhhhhhhhh.....................



ಮರೆತರೂ... ಮರೆಯಲಾಗದ .... 

ನೆನೆಸಿಕೊಂಡಷ್ಟು  ಖುಷಿ ಕೊಡುವ ..... 

ದೂರವಾದರೂ ಬೇಕೆನಿಸುವ .... 

ಹಸಿವಿದ್ದರೂ ಊಟಮಾಡಲಾಗದ .. 

ಮಲಗಿದ್ದರೂ ನಿದ್ರಿಸಲಾಗದ .... 

ನೋಡಿದರೆ  ಮತ್ತೆ ನೋಡಬೇಕೆನಿಸುವ .. 

ಮನಸ್ಸಿನಲ್ಲಿದ್ದರೂ .. ಹೇಳಲಾಗದ ... 

ಅಪರಿಚಿತ ಬಾವನೆ ...... 

Saturday 2 March 2013

ಅಪ್ಪ....

                                                           


                                                               ಇಪ್ಪತ್ತು  ವರ್ಷಗಳ ಹಿಂದಿನ ಮಾತು ..... ತೊದಲು ಮಾತನ್ನು ಕಲಿತಿದ್ದೆನಂತೆ.... "ಆsss ಯಿ..  ", "ಅಪ್ಪಾsss.." , "ಅಕ್ಕಾ ", "ಅಣ್ಣಾ "........ "ಅಬ್ಬೆ"(ಅಜ್ಜಿ).... ಎಂದೆಲ್ಲ ಹೇಳಿಕೊಂಡು ಎಲ್ಲರ ಮುದ್ದಿನ ಮಗುವಾಗಿದ್ದೆನಂತೆ ... ಅಬ್ಬೆಗೆ ನಾನು ಅಂದರೆ ಪ್ರಾಣವಾಗಿತ್ತಂತೆ.  ದಿನವಿಡೀ ನನ್ನ ಆರೈಕೆಯಲ್ಲೇ ಕಾಲ ಕಳೆಯುತ್ತಿದ್ದ  ಹಣ್ಣೆಲೆ  ಆಗಿದ್ದಳಂತೆ. ಮೈತುಂಬಿಕೊಂಡಿದ್ದ  ಮಗುವನ್ನು ಎತ್ತಿಕೊಳ್ಳಲು  ಆಳುಕಾಳುಗಳು, ಪಕ್ಕದ ಮನೆಯವರು ಕಾಯುತ್ತಿದ್ದರಂತೆ.  ಕೆಟ್ಟಕಣ್ಣು  ಬೀಳುತ್ತದೆ ನನ್ನ ಮೊಮ್ಮಗಳಿಗೆ ಎಂದು ಸೆರಗಿನಲ್ಲಿ ಮುಚ್ಚಿಟ್ಟುಕೊಂಡು  ಓಡಾಡುತ್ತಿದ್ದಳಂತೆ.


                                                                ಪಾಪ ದಮ್ಮುರೋಗ  ಅಬ್ಬೆಯನ್ನು ಆವರಿಸಿತ೦ತೆ . ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅಬ್ಬೆ ಕೊನೆಗಾಲವನ್ನು ಆಸ್ಪತ್ರೆಯಲ್ಲೇ ಕಳೆಯಬೇಕಾಯಿತಂತೆ... ಮನೆಗೆ ವಾಪಸ್  ಬರಲು ಹವಣಿಸುತ್ತಿದ್ದ ಜೀವಕ್ಕೆ ಮಗನಾದ "ದತ್ತಾತ್ರೇಯ " ಸಾಂತ್ವನ ಹೇಳುತ್ತಿದ್ದನಂತೆ. ಪಾಪ ಆ ಜೀವ ಮನೆಗೆ ಬರದೇ  ಮಕ್ಕಳು ಮೊಮ್ಮಕ್ಕಳನ್ನು ನೆನೆಸಿಕೊಂಡು  ಆಸ್ಪತ್ರೆಯಲ್ಲೇ ಕೊನೆಯುಸಿರೆಳೆಯಿತಂತೆ...

                                                                 ಅಂತ್ಯಕ್ರಿಯೆ ಮುಗಿಸಿದ ಮಕ್ಕಳು ಕಾಲಕ್ರಮೇಣ ದುಃಖವನ್ನು ಮರೆತರು. ಎಲ್ಲರು ಅವರವರ ಬದುಕಿನಲ್ಲಿ ತೊಡಗಿದರು. ಎರಡು ವರ್ಷದ ಮಗುವಾಗಿದ್ದ ನನಗೆ  "ಆಸ್ತಮಾ" ಶುರುವಾಯಿತಂತೆ. ತಾಯಿಯನ್ನು ಬಲಿ ತೆಗೆದುಕೊಂಡ ರೋಗ ಮಗಳನ್ನು ಬಿಡುತ್ತಿಲ್ಲವಲ್ಲ ಎಂದು  ನರಳಾಡಿತು  ದತ್ತತ್ರಯನ ಮನಸ್ಸು.
ತಾಯಿಯನ್ನು ಕಳೆದುಕೊಂಡಾಗಿದೆ, ಚಿಗುರುತ್ತಿವ ಮೊಳಕೆಯನ್ನು ಚಿವುಟಲು ಬಿಡುವುದಿಲ್ಲ ಎಂದು ನಿರ್ಧರಿಸಿದ...


                                                                ಹಗಲು  ರಾತ್ರಿಯೆನ್ನದೆ  ಮಗಳನ್ನು ಆರೈಕೆ ಮಾಡಲು ತೊಡಗಿದ . ಹಳ್ಳಿಯ ಆಯುರ್ವೇದ  ಕಶಾಯಗಳನ್ನೆಲ್ಲ  ತಂದು ಕುಡಿಸಿ ಮಗಳ ಕಾಯಿಲೆಯನ್ನು ಸ್ವಲ್ಪ ಮಟ್ಟಿಗೆ ಗುಣಮುಖವಾಗುವಂತೆ ಮಾಡಿದ.
ರಾತ್ರಿಯೆಲ್ಲಾ ಮಡಿಲಲ್ಲಿ ಮಲಗಿಸಿಕೊಂಡು ಬಿಸಿನೀರ ಶಾಕ ಕೊಟ್ಟು ಉಸಿರಾಟ ಸಲೀಸಾಗುವಂತೆ ಮಾಡುತ್ತಿದ್ದ.
ಅಂತು ಇಂತೂ  ನನಗೆ ಐದು ವರ್ಷ ಆಯಿತು .. ಶಾಲೆಗೆ  ಹೆಸರು ಹಚ್ಚಿಸಿದ.  ಆದರೆ ನಮ್ಮೂರಿನಲ್ಲಿ ಶಾಲೆ ಇಲ್ಲ...  ನಾಲ್ಕು ಕಿಲೋಮೀಟರ್ ನಡೆದು ಹೋಗಬೇಕಿತ್ತು ... ನನ್ನ ಅನಾರೋಗ್ಯದ ಕಾರಣ ನನಗೆ ನಡೆಯಲು ಆಗುತ್ತಿರಲಿಲ್ಲ.. ಅದಕ್ಕಾಗಿ  ಅಜ್ಜನ ಮನೆಯಲ್ಲಿ ನನ್ನನ್ನು ಬಿಟ್ಟು ಅಲ್ಲಿ ಹತ್ತಿರವಿದ್ದ ಶಾಲೆಗೇ ಸೇರಿಸಿದ.


                                                                    ಆಗ ನನಗೆ  ಅಸ್ತಮಾ  ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿತ್ತು .  ಹದಿನೈದು ದಿನಕ್ಕೆ ಒಮ್ಮೆ  ಕಾಣಿಸಿಕೊಳ್ಳುತ್ತಿತ್ತು. ನನಗೆ ಇನ್ನು ನೆನಪಿದೆ  ಅವತ್ತಿನ ದಿನ ರಾತ್ರಿ ..  ಸುಮಾರು  ಹನ್ನೆರಡು ಗಂಟೆ ದಾಟಿರಬಹುದು ....  ನನಗೆ ಉಸಿರಾಟ ಕಷ್ಟವಾಗಿತ್ತು...  ಆಗ ಹಳ್ಳಿಗಳಲ್ಲಿ ಇನ್ನೂ  ಫೋನಿನ  ವ್ಯವಸ್ತೆ  ಇರಲಿಲ್ಲ ... ಅಪ್ಪನಿಗೆ ಸುದ್ದಿ ಮುಟ್ಟಿಸುವುದು  ಕಷ್ಟವಾಗಿತ್ತು ..ನನ್ನ ಮಾವ (ಅಮ್ಮನ ಅಣ್ಣ ) ಹತ್ತಿರದ "ನೆಲೆಮಾವಿಗೆ "(ಊರಿನ ಹೆಸರು ) ಹೋಗಿ ಅಲ್ಲಿ ಚಂದ್ರಶೇಕರ ಭಟ್ಟ ಎಂಬ ವೈದ್ಯರಿದ್ದರು ... ಅವರ ಬಳಿ  ಕರೆದುಕೊಂಡು ಹೋಗಿ ತಾತ್ಕಾಲಿಕ ಚಿಕಿತ್ಸೆ ನೀಡಿಸಿದರು. ನಂತರ ಪರಿಸ್ತಿತಿ ಕೈ ಮೀರುವುದರೊಳಗೆ ವಾಹನದ ವ್ಯವಸ್ತೆ ಮಾಡಿ ಸಿರಸಿಗೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು.

                                                                     ಮರುದಿನ  ಅಪ್ಪ ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋದ... ಆಗ  ಎಲ್ಲಾ  ಕಡೆ ವಿಚಾರಿಸಲು ತೊಡಗಿದ  ಅಸ್ಥಮ ಕ್ಕೆ  ಯಾವ ಯಾವ ಹಳ್ಳಿಗಳಲ್ಲಿ  ಔಷಧ  ಕೊಡುತ್ತಾರೆ ಎಂದು.  ನಂತರ ನನ್ನನ್ನು ಅಜ್ಜನ ಮನೆಗೆ ಕಳಿಸಲಿಲ್ಲ.  ಹಿತ್ಲಕೈ  ಶಾಲೆಗೇ ಶಿಕ್ಷಕರನ್ನು ಕರೆತರಲು "BEO" ಕಚೇರಿಗೆ ಅಲೆದಾಟ ಆರಂಬಿಸಿದ..  ಅಂತು ಇಂತೂ ಅಪ್ಪನ  ಪರಿಶ್ರಮಕ್ಕೆ ಬೆಲೆ ಸಿಕ್ಕಿತು... ಹಿತ್ಲಕೈ  ಸರಕಾರಿ  ಪ್ರಾಥಮಿಕ  ಶಾಲೆ  ಪ್ರಾರಂಭವಾಯಿತು. ಶಾಲೆಯ ಕತೆಯನ್ನು  " ಶಾಲೆ ಮಾಸ್ತರು " ಶೆರ್ಷಿಕೆಯಡಿಯಲ್ಲಿ  ಆಗಲೇ ಬರೆದಿದ್ದೇನೆ ...

                                                                     ನಂತರ ಅಪ್ಪ ನನಗೆ  ಎಲ್ಲ ಹಳ್ಳಿಗಳಲ್ಲಿ ಔಷದ ಗಳನ್ನೂ  ಕೊಡಿಸಿದರು... ಒಂದೊಂದು ಔಷದಿಯು  ಒಂದೊಂದು ರುಚಿ .... ಕೆಲವೊಂದು ಕಹಿ ... ಕೆಲವೊಂದು ಕೋಳಿಮೊಟ್ಟೆಯ ವಾಸನೆ ... ಕೆಲವೊಂದು ಖಾರ ... ಬೇಡ ಎಂದರು ಕೇಳದೆ ಬಾಯಿಗೆ "ಗೊಟ್ಟ " ಇಟ್ಟು  ಕುಡಿಸುವ ನಾಟಿ ವೈದ್ಯರು ...  ಅದರ ಮೇಲಿನಿಂದ
"ಪಥ್ಯ"....  ಮೊಸರು ತಿನ್ನಬಾರದು, ಕರಿದ ಪದಾರ್ಥ ತಿನ್ನಬಾರದು, ಕೊನೆಗೆ ಬಾಳೆಹಣ್ಣು ತಿನ್ನಬಾರದು ....

                                                                      ಮನೆಯಲ್ಲಿ ಹಬ್ಬಗಳಾದಾಗ  ಅಳುವೇ ಬರುತ್ತಿತ್ತು .... ಎಲ್ಲರು  ತಿನ್ನುತ್ತಾರೆ ನಾನು ಮಾತ್ರ "ಪಥ್ಯ "...... "ಗಣೇಶ ಹಬ್ಬ "ವಾಗಿತ್ತು ....  ಆಯಿ ಚಕ್ಕುಲಿ ಮಾಡುತ್ತಿದ್ದಳು ... ತುಂಬಾ ಆಸೆಯಾಗಿ  ಯಾರೂ ಇಲ್ಲದ ಹೊತ್ತಿನಲ್ಲಿ ಎರಡು ಚಕ್ಕುಲಿ ತೆಗೆದು ತಿಂದುಬಿಟ್ಟೆ... ಅಪ್ಪ ತೋಟಕ್ಕೆ ಹೋಗಿದ್ದರು .... ನನಗೆ ಉಸಿರಾಟದ ತೊಂದರೆ ಶುರು ...... ಎಷ್ಟು ತೀವ್ರವಾಗಿತ್ತೆಂದರೆ  ಉಸಿರಾಟ ನಿಂತು ನಿಂತು ಆಗುತ್ತಿತ್ತು ... ಏನೇ ಮಾಡಿದರು ನಿಯಂತ್ರಣಕ್ಕೆ ಬರಲಿಲ್ಲ.. ..  ಆಗ ನಮ್ಮೂರಿಗೆ ಬಸ್ಸಿನ ವ್ಯವಸ್ತೆ ಇರಲಿಲ್ಲ ... ಅಘನಾಶಿನಿ  ನದೀ ದಾಟಿ  ಐದು ಕಿಲೋಮೀಟರ್ ನಡೆದರೆ ಅಲ್ಲಿಂದ ಸಿರ್ಸಿ ಗೆ ಹೋಗಲು ಬಸ್ ಸಿಗುತ್ತಿತ್ತು ...

                                                             ಅಪ್ಪ  ತೋಟದಿಂದ ಬಂದವರೇ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ನದಿ ದಾಟಿ ನಡೆದು ಕೊಂಡೆ ಹೋಗಿ ಆಸ್ಪತ್ರೆಗೆ ಸೇರಿಸಿದರು ... ಒಂದು ವಾರದ  ನಂತರ ನನ್ನ  ಅರೋಗ್ಯ ಸುಧಾರಿಸಿತು ... ನಂತರ  " ನೆರ್ಲಮನೆ " ಯಲ್ಲಿ ಒಬ್ಬರು ಡಾಕ್ಟರ್  ಇದ್ದರು .. ಅವರು ಇಂಗ್ಲೆಂಡಿನಲ್ಲಿ ಡಾಕ್ಟರ ಆಗಿ ಕೆಲಸ ಮಾಡುತ್ತಿದ್ದರು ... ಅವರ ಬಳಿ  ಚಿಕಿತ್ಸೆ ನೀಡಿಸಿದರು ...  ನಂತರ ಒಂದು ಔಷದದ ಶೀಶೆ ನನ್ನ ಬಳಿ ಯಾವಾಗಲು ಇಟ್ಟುಕೊಂಡಿರಲು ಹೇಳಿದರು ...  ಉಸಿರಾಟಕ್ಕೆ ತೊಂದರೆ ಆದ ತಕ್ಷಣ ಅದನ್ನು ಬಾಯಿಗೆ ಸ್ಪ್ರೇ ಮಾಡಿಕೊಳ್ಳಲು ಹೇಳಿದರು .... ಇದರಿಂದ ನನ್ನ ಉಸಿರಾಟದ ತೊಂದರೆಗೆ ಪರಿಹಾರ  ಸಿಕ್ಕಿತು , ಆದರೆ ಔಷದ  ಹೃದಯಕ್ಕೆ ಹಾನಿ ಮಾಡಲು ಪ್ರಾರಂಭಿಸಿತ್ತು ... !!!!

                                                            ಮತ್ತೆ ಅಪ್ಪನಿಗೆ ಚಿಂತೆ ಶುರು .... ಮಗಳನ್ನು ಕಾಪಾಡಬೇಕು...  ಎಲ್ಲ ದೇವರಿಗೂ ಹರಕೆ ಹೊತ್ತರು ...  ಯಾವಾಗಲು ಅಪ್ಪನ ಮಡಿಲಲ್ಲೇ ಮಲಗುತ್ತಿದ್ದೆ ... ಆಯಿ ತುಂಬಾ ಭಾವುಕಳು ... ಅವಳಿಗೆ ನನ್ನ ಪರಿಸ್ತಿತಿ ಅಳುವನ್ನೇ ತರುತ್ತಿತ್ತು ... ಆಯಿಗೆ ಸಮಾಧಾನ ಹೇಳುತ್ತಿದ್ದೆ "ನನಗೆ ಎಂತೂ ಆಗ್ತಿಲ್ಲೆ ಆಯಿ ... ಅಪ್ಪ ನಂಗೆ ಎಂತ ಆಗಲು ಬಿಡ್ತ್ನಿಲ್ಲೇ .." ನನ್ನ ಅಪ್ಪನ ಮೇಲೆ ಅಷ್ಟು ನಂಬಿಕೆ ...  ಮತ್ತೆ ಹಳ್ಳಿ ಔಷದಿಯ ಮೊರೆ ಹೋಗಿದ್ದೆವು .... ಆಗ ನಾನು 9 ನೇ  ತರಗತಿ ಓದುತ್ತಿದ್ದೆ ..." ಹಲಸಿನ ಹಳ್ಳಿ " ಎಂಬಲ್ಲಿ ಗೆ  ಕರೆದು ಕೊಂಡು  ಹೋಗಿ ಸೊಪ್ಪಿನ ಔಷದಿ ಕುಡಿಸಿದರು ... ನನ್ನ ಅಪ್ಪನ ಪರಿಶ್ರಮಕ್ಕೆ ಅಲ್ಲಿ ಬೆಲೆ ಸಿಕ್ಕಿತು .... ನನ್ನ ಅಸ್ಥಮ ಒಂದು ವಾರಕ್ಕೆ ಸಂಪೂರ್ಣವಾಗಿ ಮಾಯಾ ... ನಾನು ಮೊಸರು ತಿನ್ನುತ್ತಿದ್ದೆ , ಕರಿದದ್ದು ತಿಂದೆ ಏನು ಆಗಲೇ ಇಲ್ಲ ........


                                                                 ಅಪ್ಪ ಎಲ್ಲ ಜನ್ಮದಲ್ಲೂ  ನೀನೆ ನನ್ನ ಅಪ್ಪ ಆಗಿರು ಎಂದು  ಬಯಸುತ್ತೇನೆ ...ನಾನು ಇವತ್ತು ಖುಷಿಯಿಂದ ಜೀವನ ನಡೆಸುತ್ತ ಇದ್ದೀನಿ ಅಂದ್ರೆ ಅದಕ್ಕೆ ನೀನೆ ಕಾರಣ ... ಪ್ರತ್ಯಕ್ಷ ದೇವರು .... ನಾನು ದೇವರನ್ನು ನಂಬುವುದಕ್ಕಿಂತ  ಜಾಸ್ತಿ  ಅಪ್ಪನನ್ನು  ನಂಬುತ್ತೇನೆ ... ಇಷ್ಟು ಒಳ್ಳೆ ಅಪ್ಪನನನ್ನು ನನಗೆ ಕೊಟ್ಟಿದ್ದಕ್ಕೆ ದೇವರಿಗೂ ಒಂದು ಥ್ಯಾಂಕ್ಸ್ ...................


                                              

                                                                 


Thursday 10 January 2013

ವಿರಹ ......

ಕೊಳದ ಅಲೆಗಳನ್ನು ನೋಡಿ ...                     
ಕಣ್ಣಂಚಿನಲ್ಲಿ ಕಂಬನಿ ಜಾರುತ್ತಿದೆ ...
ಪ್ರಿಯಾ ನಿ ಬರಲಿಲ್ಲವೆಂದು ...
ನಿನ್ನ ಕಣ್ಣ ಹೊಳಪಿಗಾಗಿ ಕಾದು ....
ಕಣ್ಣಂಚಲ್ಲಿ ಕಂಬನಿ ಜಾರುತ್ತಿದೆ ...
ನೀನಿಲ್ಲದೆ ಮೂಗನಾಗಿದ್ದೇನೆ ..
ಮಳೆಬಂದು ಕೊಚ್ಚಿ ಹೋದಂತೆ ...
ಕಾಲಿಯಗಿದೆ ಮನಸ್ಸು ....
ನಿನ್ನ ಪ್ರೀತಿಗಾಗಿ , ಒಂದು ಮುಗುಳು ನಗುವಿಗಾಗಿ ,
ಕಾಯುತ್ತಿರುವೆ ...........
                 
                      

ಕಣ್ಣೀರು .........

ಮನಸ್ಸಿಗೆ ನೋವಾದರೆ ....                          
ಕಣ್ಣು  ಕಂಬನಿ ಸುರಿಸುತ್ತದೆ .....
ಕಣ್ಣಿಗೆ ಧೂಳು ಬಿದ್ದರೂ ...
ಕಣ್ಣಲ್ಲಿ ನೀರು ಬರುತ್ತದೆ ....
ಪಾಪಾ ಕಣ್ಣೀರು ...
ನೋವಾದವರ ಕೆನ್ನೆ ಸವರಿ
ಸಾಂತ್ವನ ನೀಡುತ್ತದೆ .....
ಆದರೆ ಕಣ್ಣೀರಿಗೆ  ನೋವಾದರೆ ?????
ಕಣ್ಣೀರಿಗೆ  ಸಂತೈಸಲು ಯಾರು ?????
ಕಣ್ಣೀರಿಗೆ "ಕಣ್ಣೀರೇ " ಸ್ನೇಹಿತ ......


Tuesday 1 January 2013

ಓತಿಕ್ಯಾತ


                                                                         ಶಾಲೆಯಲ್ಲಿ ಎಲ್ಲಾ ಮಕ್ಕಳಿಗೂ ಲೀಡರ್ ನಾನಾಗಿದ್ದೆ, ಎಲ್ಲರ ಹತ್ತಿರವೂ ಕೆಲಸ ಮಾಡಿಸುತ್ತಿದ್ದೆ. ಕಸ ಹೆಕ್ಕಿಸುವುದು, ನೀರು ತರಿಸುವುದು, ಹೀಗೆ ಚಿಕ್ಕ ಪುಟ್ಟದ್ದನ್ನೆಲ್ಲ ಮಾಡಿಸುತ್ತಿದ್ದೆ. ಮೊದ ಮೊದಲೂ ಎಲ್ಲಾರೂ ಸಮನ್ವಯಕ್ಕ ಹೇಳಿದ್ದು ಅಂದ್ರೆ ಶ್ರಧ್ಧೆಯಿಂದ ಮಾಡ್ತಾ ಇದ್ರು. ಕೊನೆ ಕೊನೆಗೆ ಅವರೂ ದೊಡ್ಡವರಾದ ಹಾಗೆ ನಾವೇಕೆ ಮಾಡಬೇಕು….? ಎನಿಸಲು ಶುರುವಾಯಿತು.

                                                                       ಶಾಲೆಯಲ್ಲಿ ನಾನು ಮಹಾರಣಿಯಾಗಿದ್ದೆ, ನನ್ನ ಹಿಂದಿನಿಂದ ನನಗೆ “ಹಾವುರಾಣಿ” ಎಂದು ಹೆಸರಿಟ್ಟರು…..!!!!   ಮಕ್ಕಳು ಎಷ್ಟು ಬೇಗ ಬದಲಾಗುತ್ತಾರೆ ನೋಡಿ….

                                                                       ಒಂದು ದಿನ ಉಳಿದ ಮಕ್ಕಳೆಲ್ಲ ಒಟ್ಟಾಗಿಕೊಂಡು
“ಸಮನ್ವಯಕ್ಕ ನೀನೂ ಕಸ ಹೆಕ್ಕು ನಂಗಳ ಸಂತಿಗೆ” ಎಂದರು. ನನಗೆ ಆಗ ತಿಳಿಯಿತು. ಮಹಾರಾಣಿಯ ದರ್ಬಾರು ಮುಗಿಯಿತು, ಇನ್ನು ನಾನೂ ಇವರ ಜೊತೆ ಕೆಲಸ ಮಾಡಬೇಕು, ಎಂದು…

                                                                     ಆಯಿತು ಎಂದು ಕಸ ಹೆಕ್ಕಲು ಶುರು ಮಾಡಿದೆ. ಕಸಹೆಕ್ಕುವಾಗ, ಒಂದು
“ಓತಿಕ್ಯಾತ “ ನನ್ನ ಕೈಗೆ ಕಚ್ಚಿದಂತಾಯಿತು… (ಬಹುಶಃ ತಾಗಿರಬೇಕು) ನಾನು ಅಳಲು ಶುರು ಮಾಡಿದೆ. “ನಂಗೆ ಓತಿಕ್ಯಾತ ಕಚ್ಚಿದೆ, ನೀವೆಲ್ಲಾ ಅದನ್ನು ಹೊಡೆದು ಕೊಲ್ಲಬೇಕು…”

                                                                      ಆಗ ಅವರೆಲ್ಲಾ ಮಹಾರಾಣಿಯ ಆಜ್ಞೆಯನ್ನು ಪಾಲಿಸುವ ಸೈನಿಕರಂತೆ ಕೋಲು ಕಲ್ಲುಗಳನ್ನು ಹಿಡಿದು. ಓತಿಕ್ಯಾತವನ್ನು ಓಡಿಸಿಕೊಂಡು ಹೋಗಿ ಕೊಂದರು. ಅವರಿಗೆಲ್ಲಾ, ಏನೋ ಸಾಧಿಸಿದ್ದೇವೆ ಎಂಬ ಹೆಮ್ಮೆ. ನಂತರ ಓತಿಕ್ಯಾತದ ಕುತ್ತಿಗೆಗೆ ದಾರ ಕಟ್ಟಿ ಮರಕ್ಕೆ ನೇತು ಹಾಕಿ, ಶಾಲೆಯ ಒಳಗೆ ಹೋದೆವು.

                                                                    ಮಧ್ಯಾಹ್ನ ಶಾಲೆ ಬಿಟ್ಟಾಗ ಬಂದು ನೋಡಿದರೆ, ಓತಿಕ್ಯಾತ ಮಾಯ…….!!!!!  ದಾರ ಮಾತ್ರ ನೇತಾಡುತಿತ್ತು….   ನಮಗೆಲ್ಲಾ ಭಯ…  ಮಕ್ಕಳೆಲ್ಲಾ ಸೇರಿ “ಓತಿಕ್ಯಾತ ಭೂತ ಆಗೋಜು, ಸಮಕ್ಕ ಅದು ನಿನ್ನ ಮೇಲೆ ಸೇಡು ತೀರಿಸಿಕೊಳ್ತು… ತಡೀ….” ಎಂದು ನನ್ನ ಹೆದರಿಸಿದರು….                                                                  
ನನಗೆ ಭಯವೋ ಭಯ…

                                                                     ಒಂದು ತಿಂಗಳ ನಂತರ, ನಾವೆಲ್ಲಾ ಶಾಲೆ ಮುಗಿಸಿ, ಸಂಜೆ ಮನೆಗೆ ಬರುತ್ತಾ ಇದ್ದೆವು… ದಾರಿಯಲ್ಲಿ, ಮತ್ತೆ ಓತಿಕ್ಯಾತ ಪ್ರತ್ಯಕ್ಷ…!!! ಎಲ್ಲಾ ಮಕ್ಕಳೂ,
“ಸಮಕ್ಕಂಗೆ ಕಚ್ಚಿದ ಓತಿಕ್ಯಾತ ಮತ್ತೆ ಬಂಜು……” ಎಂದು ಕಿರುಚಿ, ಕಲ್ಲುಕಳನ್ನು ಎತ್ತಿ, ಓತಿಕ್ಯಾತಕ್ಕೆ ಎಸೆಯಲು ಶುರುಮಾಡಿದರು… ಪಾಪ ಆ ಓತಿಕ್ಯಾತ ಭಯದಿಂದ, ಹತ್ತಿರವಿದ್ದ ಗಿಡವನ್ನು ಹತ್ತಿತು… ಕೋಲುಗಳನ್ನು ಹಿಡಿದು, ಎಲ್ಲರೂ ಓತಿಕ್ಯಾತವನ್ನು ಹೊಡೆಯಲು ಮರದ ಬಳಿ ಹೋದರು… ನಂಗೆ ಭಯ.. ಸ್ವಲ್ಪ ದೂರದಲ್ಲಿ ನಿಂತು ಇದೆಲ್ಲವನ್ನು ನೋಡುತಿದ್ದೆ… ಆಗ, ಸವಿ “ ಅಕ್ಕಾ, ನೀನು ಕಲ್ಲು ಎಸಿ, ಅದನ್ನು ನೀನೂ ಸಾಯಿಸಬೇಕು” ಎಂದಳು…

                                                                   ನಾನು ಟಾರ್ ರೋಡಿನ ಪಕ್ಕದಲ್ಲಿದ್ದ, ಸ್ವಲ್ಪ ದೊಡ್ಡ ಜಲ್ಲಿ ಕಲ್ಲನ್ನು ಎತ್ತಿ ಗಿಡದ ಕಡೆ ಎಸೆದೆನು, ಅದು ನಾಗರಾಜನ ಹಣೆಗೆ ತಾಗಿತು…ರಕ್ತ ಸುರಿಯ ತೊಡಗಿತು…ಅವನು ನಮ್ಮ ಮನೆಯ ಕೆಲಸಕ್ಕೆ ಬರುವ ರಾಮನ ಮಗ.. ರಾಮ, ನನ್ನ ಅಪ್ಪನ ಹತ್ತಿರ ಹೇಳಿದರೆ, ನನಗೆ ಛಡಿ ಏಟು ಖಂಡಿತ,….ಏನು ಮಾಡುವುದು ಎಂದು ಭಯ…

                                                                    ಆಗ ನನ್ನ ಸಹಾಯಕ್ಕೆ ಬಂದಿದ್ದು, “ಕಾಂಗ್ರೆಸ್ ಸೊಪ್ಪು”…. (ಪಾರ್ಥೆನಿಯಂ ಗಿಡ) ಅದನ್ನು ಕಲ್ಲಿನ ಮೇಲಿಟ್ಟು ಜಜ್ಜಿ, ಸೊಪ್ಪನ್ನು ಹಣೆಗೆ ಒತ್ತಿ ಹಿಡಿದೆನು… ರಕ್ತ ಬರುವುದು ಸ್ವಲ್ಪ ಕಡಿಮೆ ಆಯಿತು… ನಂತರ ಸಿನಿಮಾದಲ್ಲಿ ಸೀರೆಯ ತುದಿಯನ್ನು ಹರಿದು ಪಟ್ಟಿ ಕಟ್ಟುವುದನ್ನು ನೋಡಿದ್ದೆನು… ನನ್ನ ಪ್ರಾಕಿನ, ಬಾಲವನ್ನು ಕತ್ತರಿಸಿ, ಅವನ ಹಣೆಗೆ ಪಟ್ಟಿ ಕಟ್ಟಿ, ಬೆಟ್ಟದ ದಾರಿಯಿಂದ ಅವನ ಮನೆಗೆ ಕಳಿಸಿದೆವು…ಊರಿನ ದಾರಿಯಲ್ಲಿ ಯಾರಾದರೂ ನೋಡಿದರೆ, ನಾನು ಅಪ್ಪನ ಬಳಿ ಹೊಡೆತ ತಿನ್ನಬೇಕಲ್ಲಾ, ಎಂದು…

ಪಾಪ ನಾಗರಾಜ, ಯಾರ ಬಳಿಯೂ, ನಾನು ಕಲ್ಲು ಎಸೆದು ಹಾಗಾಯಿತು ಎಂದು ಬಾಯಿ ಬಿಡಲೇ ಇಲ್ಲ…

ಬಿದ್ದು ಪೆಟ್ಟಾಯಿತು ಎಂದು, ಸುಳ್ಳು ಹೇಳಿ ನನ್ನನ್ನು ಬಚಾವ್ ಮಾಡಿದ್ದ…

ಓತಿಕ್ಯಾತದ ಅವಾಂತರ ಇಷ್ಟೆಲ್ಲಾ ಆಗಿತ್ತು…

ಅಂದಿನಿಂದ, ಯಾವ ಓತಿಕ್ಯಾತದ ತಂಟೆಗೂ ಹೋಗಲಿಲ್ಲ….