ನಮಗೆ ಶಾಲೆ ಅಂದ್ರೆ, ಭಯವೇ
ಹೋಗಿ ಬಿಟ್ಟಿತ್ತು. . . . ಹೊಸ ಮಾಸ್ತರು ಬರ್ತಾರೆ, ಬಿಟ್ಟು ಹೊಗ್ತಾರೆ, ಇದೇ ಹಣೆಬರಹ… ನಮಗೆ ಪಾಠ
ಹೇಳಿ ಕೊಡುವಷ್ಟು ತಾಳ್ಮೆ, ಈ ಊರಿಗೆ ಹೊಂದಿಕೊಳ್ಳುವ ಮನೋಭಾವ ಯಾವ ಮಾಸ್ತರಿಗೂ ಇಲ್ಲ ಎನ್ನುವುದು,
ನಮಗೆಲ್ಲಾ ಖಚಿತವಾಗಿತ್ತು…….ಆದರೂ ಒಂದು ಸಣ್ಣ ನಿರೀಕ್ಷೆ………
ಅಂತೂ ಇಂತೂ ನಾವು ಮೂರನೇ ಕ್ಲಾಸ್,
ಆವಾಗ ನಮಗೆ ಹೊಸದಾಗಿ ಬಂದ ಮಾಸ್ತರೇ “ನಾಯ್ಕ್ ಮಾಸ್ತರು”….. ಭಾರಿ ಒಳ್ಳೆಯ ಗುಣ, ಬಡತನದಲ್ಲಿ ಓದಿ
ಬೆಳೆದಿದ್ದರು. ಒಳ್ಳೆಯ ಮಾತುಗಾರರು, ನೈತಿಕತೆ ಉಳ್ಳವರು. ಒಟ್ಟಿನಲ್ಲಿ ಹೇಳಬೇಕೆಂದರೆ, ಆದರ್ಶ ಶಿಕ್ಷಕ
ಪ್ರಶಸ್ತಿಗೆ ಅತ್ಯುತ್ತಮ ಅರ್ಹತೆಯುಳ್ಳವರಾಗಿದ್ದರು.
ನಮ್ಮನ್ನೆಲ್ಲಾ ಅವರ ಮಕ್ಕಳಂತೆ
ನೋಡಿಕೊಳ್ಳುತ್ತಿದ್ದರು. ಪಾಲಕರನ್ನು ವಾರಕ್ಕೆ ಒಂದು ಬಾರಿ ಭೇಟಿ ಮಾಡಿ ಮಕ್ಕಳ ಅಭ್ಯಾಸದ ಪ್ರಗತಿಯ
ಬಗ್ಗೆ ಚರ್ಚಿಸುತ್ತಿದ್ದರು. ನಮಗೆಲ್ಲಾ ಆಗಲೇ ಶಾಲೆಯೆಂದರೆ ಏನು……? ಶಿಕ್ಷಕರ ಜವಾಬ್ದಾರಿ ಏನು ಎಂದು
ಅರ್ಥವಾಗಿದ್ದು. ಶಾಲೆಯಲ್ಲಿ ಶಾರದಾ ಪೂಜೆ ನಡೆಸಲು ಪ್ರಾರಂಭಿಸಿದರು. ನಮಗೆ ಶಾಲೆಯೆಂದರೆ ಖುಷಿ, ಭಾನುವಾರ
ಯಾಕಾದರೂ ರಜಾ ಬರುತ್ತೊ ಅನ್ನುವಷ್ಟು ಬೇಜಾರಗುತ್ತಿತ್ತು.
ನಾಯ್ಕ್ ಮಾಸ್ತರಿಗೆ, ಮಕ್ಕಳು ಚೆನ್ನಾಗಿ
ಅಕ್ಷರ ಬರೆಯಲಿ ಎಂಬ ಆಸೆ ಇತ್ತು. ನಮ್ಮದೆಲ್ಲಾ, ಕಾಗೆ ಕಾಲು, ಗುಬ್ಬಿ ಕಾಲಿನ ಅಕ್ಷರ. ಅದಕ್ಕಾಗಿ
ಅವರು ಜೋಡಿ ಗೆರೆ ಪಟ್ಟಿ ತೆಗೆಯದುಕೊಂಡು ದಿನಾಲೂ ಒಂದೊಂದು ಪುಟ ಬರೆಯಲು ಹೇಳಿದರು. ನಾವು ಜೋಡಿಗೆರೆ
ಪಟ್ಟಿಯಲ್ಲೂ ಕಾಗೆಕಾಲಿನ ಅಕ್ಷರವನ್ನೇ ಬರೆಯುತ್ತಿದ್ದೆವು. ನಮ್ಮ ಪಟ್ಟಿ ನೋಡಿದ ಮಾಸ್ತರು, “ನಾಳೆ ದುಂಡಗೆ ಬರೆದುಕೊಂಡು ಬನ್ನಿ, ಇಲ್ಲ್ದೆ ಇದ್ರೆ ಶಾಲೆ ಹೊರಗೆ ಕಳಿಸ್ತೇನೆ” ಎಂದರು.
ನಾನು ಮನೆಗೆ ಹೋಗಿ, ಕಷ್ಟಪಟ್ಟು
ಗುಂಡಗಿನ ಅಕ್ಷರಗಳನ್ನು ಪಟ್ಟಿಯ ಮೇಲೆ ಮೂಡಿಸಿದೆ, ಆಟವಾಡಲು ಪಕ್ಕದ ಮನೆಗೆ ಹೋಗುವುದು ನನ್ನ ಅಭ್ಯಾಸ.
ಅಲ್ಲಿ ಹೋದರೆ, ನನ್ನ ಗೆಳೆಯ ಕೋಣೆಯ ಬಾಗಿಲು ಹಾಕಿಕೊಂಡು ಬರೆಯುತ್ತಿದ್ದಾನೆ. “ಬಾಗಿಲು ತೆಗಿಯೋ, ನಾ ಆಟ ಆಡಲೆ ಬಂದಿ” ಎಂದರೆ, ಅವನು “ ನಾ ಬಾಗ್ಲ ತೆಗಿತ್ನಿಲ್ಲೆ,
ನೀ ನಂಗೆ ಶೇಮ್ ಶೇಮ್ ಮಾಡ್ತೆ” ಎಂದ. ನಂಗೆ ಆಶ್ಚರ್ಯ!!!!!!!!.....
“ನೀ ಬರಿತಾ ಇದ್ರೆ ನಾ ಎಂತಕ್ಕೆ ಶೆಮ್ ಶೇಮ್ ಮಾಡ್ಲಿ…..?” ಎಂದೆ….
ಆಗ ಒಳಗಿನಿಂದ ಧ್ವನಿ ಬಂತು “ಮಾಸ್ತರು ದುಂಡಗೆ ಬರೆಯಲೆ ಹೇಳಿದ್ರಿಲ್ಯ……? ಅದಕ್ಕೆ ನಾನು ಬಟ್ಟೆ ಬಿಚ್ಕಂಡು
ದುಂಡಗೆ ಬರಿತಾ ಇದ್ದಿ…….” ಅವನ ಮಾತು ಕೇಳಿ ನನಗೆ ನಗು ತಡೆಯಲಾಗಲಿಲ್ಲ.
ಬಿದ್ದು ಬಿದ್ದು ನಕ್ಕೆನು…. ಆಮೇಲೆ ಅವನಿಗೆ “ದುಂಡಗೆ” ಎಂದರೆ “ಗುಂಡಗೆ” “ರೌಂಡ್ ರೌಂಡಾಗಿ” ಎಂದು ಅರ್ಥ ಮಾಡಿಸುವುದರಲ್ಲಿ ಸಾಕೋ ಬೇಕಾಯಿತು…..
ಮರುದಿನ ಮಾಸ್ತರಿಗೂ ಈ ವಿಷಯವನ್ನು
ಹೇಳಿದೆವು.... ಅವರಿಗೂ ನಗು, ನಮ್ಮ ಹಳ್ಳಿ ಮಕ್ಕಳ ಮುಗ್ದತೆಗೆ ನಗಬೇಕೋ ಅಳಬೇಕೋ ತೊಚದಾಯಿತು…..